Friday 21 December 2018

ಗಿಳಿಬಾಗಿಲು ಹವ್ಯಕ ನುಡಿಗಟ್ಟುಗಳು 55 ನಾಯಿ ಸಂತೆ ಇದ್ದವು © ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿ ಬಾಗಿಲು- ನಾಯಿ ಸಂತೆ ಇದ್ದವು
ನಮ್ಮ ಭಾಷೆಲಿ ಬಳಕೆಲಿ ಇಪ್ಪ ತಿರಸ್ಕಾರದ ಮಾತಿದು. ಎಂತದಿದು ನಾಯಿ ಸಂತೆ ಇದ್ದವು ಹೇಳಿರೆ.
ಆನು ಸಂಸ್ಕೃತ ಎಂಎ ಓದುಲೆ ಹೆರಡುವಗ ಆನು ಈ ಮಾತಿನ ಕೇಳಕ್ಕಾಗಿ ಬಂತು.ಆದರೆ ನಾಯಿ ಸಂತೆ ಇದ್ದವು ಹೇಳಿರೆ ಎಂತದು ಹೇಳಿ ಅರ್ಥ ಆಗಿತ್ತಿಲ್ಲೆ. ಅವ ನಾತಿ ಸಂತೆ ತಿರುಗುತ್ತಾ ಹೇಳುವ ಮಾತುದೆ ಇದ್ದು.ಅವ ಬರೀ ತಿರ್ಗೇಲು ನಾಯಿ ಹೇಳುವ ಬೈಗಳಿನ ಮಾತುದೆ ನಮಯ ಭಾಷೆಲಿ ಇದ್ದು‌.ಹಾಂಗಾಗಿ
ಯಾವುದಾದರೂ ಸಂತೆ ಅಪ್ಪಗ ನಾಯಿಗ ಅಂತೇ ತಿರುಗಿಯೊಂಡು ಇರ್ತವು.ಅವಕ್ಕೆ ಅಲ್ಲಿ ಎಂತ ಕೆಲಸವೂ ಇಲ್ಲೆ‌.ಬಹುಶಃ ಈ ಅರ್ಥಲ್ಲಿ ಎಂಎ ಓದಿದೋರು ಕೆಲಸ ಇಲ್ಲದ್ದೆ ನಾಯಿಗ ಸಂತೆಲಿ ಅಂತೆ ತಿರುಗುವ ಹಾಂಗೆ ತಿರುಗುತ್ತಾ ಇದ್ದವು ಹೇಳುವ ಅರ್ಥ ಆದಿಕ್ಕು ಹೇಳಿ ಈಗ ಅನಿಸಿತ್ತು.ಆದರೆ ಎಂಎ ಹೇಳಿರೆ  ಆರ್ಟ್ಸ್ ಓದಿರೆ  ಪ್ರಯೋಜನ ಇಲ್ಲೆ ಕೆಲಸ ಸಿಕ್ಕುತ್ತಿಲ್ಲೆ ,ನಾಯಿ ಸಂತೆಲಿ ತಿರುಗುವ ಹಾಂಗೆ ತಿರುಗಕ್ಕಾವವುತ್ತು ಹೇಳುದು ತಪ್ಪು ಕಲ್ಪನೆ‌‌ .ಪ್ರತಿಭೆ,ಪರಿಶ್ರಮ ,ಪ್ರಾಮಾಣಿಕತೆ ಇದಗದರೆ ಅವರ ಅವಕಾಶಂಗ ಹುಡುಕಿಕೊಂಡು ಬತ್ತು ಹೇಳುದರಲ್ಲಿ ಎರಡು ಮಾತಿಲ್ಲೆ.
© ಡಾ‌.ಲಕ್ಷ್ಮೀ ಜಿ ಪ್ರಸಾದ

Friday 14 December 2018

ಗಿಳಿ ಬಾಗಿಲು 54ಮೂಲೆಲಿದ್ದ ಮಡುವಿನ ಕಾಲಿಂಗೆಳದು ಹಾಕಿಕೊಂಡ ಹಾಂಗೆ© ಡಾ.ಲಕ್ಷ್ಮೀ ಜಿ ಪ್ರಸಾದ

ಮೂಲೆಲಿದ್ದ ಮಡುವಿನ ಕಾಲಿಂಗೆಳದು ಹಾಕಿಕೊಂಡ ಹಾಂಗೆ
ಇದೊಂದು ನಮ್ಮ ಭಾಷೆಲಿ ಅಂಬಗಂಬಕ ಬಳಕೆ ಅಪ್ಪ ಮಾತು.ಸೀತಾರಾಮ್ ನ ಮಗಳು ಜಾನಕಿ ಧಾರಾವಾಹಿ ನೋಡುವ ಈ ಮಾತು ಬಹಳ ಸ್ಪಷ್ಟ ಆತೆನಗೆ.ಇಲ್ಲಿ ಧಾರಾವಾಹಿ ಲಿ ಸಿಎಸ್ಪಿ ದೊಡ್ಡ ಕ್ರಿಮಿನಲ್ ಲಾಯರು.ಅವಂಗೂ ಅವನ ಹೆಂಡತಿ ರಶ್ಮಿ ಗೂ ಡೈವರ್ಸ್ ಆಗಿ ,ರಶ್ಮಿ ಚಂದು ಭಾರ್ಗಿಯ ಮದುವೆ ಆಯಿದು.ಮಗಳು ಜಾನಕಿಯ ಎನ್ನ ಸ್ವಂತ ಮಗಳ ಹಾಂಗೆ ನೊಡಿಗೊಳ್ತೆ ಹೇಳಿ ಚಂದು ಭಾರ್ಗಿ ಮಾತುಕೊಟ್ಟಿತ್ತಿದ.ಆದರೆ ‌ಮುಂದೆ ಯಾವದೋ ರಾಜಕೀಯಕ್ಕೆ ಒಳಗಾಗಿ ಅವ ಜೈಲಿಂಗಡ ಹೊಗಿ ಎಂಎಲ್ ಎ ಸೀಟಿನ ಕಳಕೊಳ್ತ.ಅದಕ್ಕೆ ಸಿಎಸ್ಪಿ ಕಾರಣ ಹೇಳಿ ಅವನ ಮಗಳು ಜಾನಕಿಗೆ ಅನ್ಯಾಯ ಮಾಡುತ್ತ.ಜಸ್ಟ್ ಬಿಎ ಓದಿದ ಬಡ ಮಾಣಿಯ ಬ್ಲ್ಯಾಕ್ ಮೇಲ್ ಮಾಡಿ ಐಎ ಎಸ್ ಹೇಳಿ ಹೇಳಿಸಿ ನಂಬಿಸಿ‌ಮದುವೆ ಮಾಡುತ್ತ .ಅಂಬಗ ಎನಗೆ ಈ ಮಾತು ನೆನಪಾತು.ಸಿಎಸ್ಪಿ ತನ್ನ ಮಗಳಿಂಗೆ ಅನ್ಯಾಯ ಮಾಡಿರೆ ಸುಮ್ಮನಿರ್ತನಾ? ಸುಮ್ಮನೆ ಅವನ ಎದುರು ಹಾಕಿಕೊಳ್ತ.ಇದರ ಪರಿಣಾಮವಾಗಿ ಭಾರ್ಗಿಯ ಎಲ್ಲ ಮೋಸಂಗಳುದೆ ಹೆರ ಬಕ್ಕು.ಅವಂಗೆ ಜೈಲು ಖಂಡಿತಾ ಅಕ್ಕು.ಸುಮ್ಮನೇ ಅವನ ದ್ವೇಷ ಕಟ್ಟಿಕೊಳ್ಳುತ್ತಾ ಚಂದು ಭಾರ್ಗಿ. ದೂರಲ್ಲಿ ಹೋಪ ಮಾರಿಯ ಮನೆಗೆ ಕರೆದ ಹಾಗೆ ಹೇಳಿ ಕನ್ನಡಲ್ಲು ಗಾದೆ ಇದ್ದು.ಅದೇ ಅರ್ಥ ಕೊಡುವ ಗಾದೆ ಮಾತಿದು.ದೂರಲ್ಲಿ ಇಪ್ಪ ಮಡು( ಕೊಡಲಿಯ) ಕಾಲಿಂಗೆ ಎಳದು ಹಾಕಿಕೊಂಬದು ಹೇಳಿರೆ ಇದು.ಮಡು ದೂರಲ್ಲಿ ಇದ್ದರೆ ಎಂತ ಅಪಾಯ ಇಲ್ಲೆ.ಅದೇ ಅದು ಕಾಲಿಂಗೆ ಬಿದ್ದರೆ ಕಾಲು ತುಂಡಕ್ಕು.ಅಕಸ್ಮಾತ್ ಆದರೆ ಎಂತ ಮಾಡುಲೆ ಎಡಿಯ.ಆದರೆ ನಾವಾಗಿಯೇ ಕಾಲಿಂಗೆ ಎಳದು ಹಾಕಿರೆ ಅಪಾಯ ತಪ್ಪಿದ್ದಲ್ಲ ಹೇಳಿ ಈ ಮಾತಿನ ಅರ್ಥ.ನಾವಾಗಿಯೇ ಅಪಾಯವ ಎಳದು ಹಾಕಿಕೊಂಬಲಾಗ ಹೆಳುವ ವಿವೇಕವ ಇದು ತಿಳಿಸುತ್ತು.
© ಡಾ.ಲಕ್ಷ್ಮೀ ಜಿ ಪ್ರಸಾದ

Monday 8 October 2018

ಮಹಿಳೆ( ಡಾ.ಲಕ್ಷ್ಮೀ ಜಿ ಪ್ರಸಾದ) ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು - ಒಂದು ಸಾಮಾಜಿಕ ವಿಶ್ಲೇಷಣೆ - ಅನಿತಾ ಜಿ,ಸಮಾಜ ಶಾಸ್ತ್ರ ಉಪನ್ಯಾಸಕರು

ಮಹಿಳೆ( ಡಾ.ಲಕ್ಷ್ಮೀ ಜಿ ಪ್ರಸಾದ) ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು - ಒಂದು ಸಾಮಾಜಿಕ ವಿಶ್ಲೇಷಣೆ
- ಅನಿತಾ ಜಿ,ಸಮಾಜ ಶಾಸ್ತ್ರ ಉಪನ್ಯಾಸಕರು
,ಸರ್ಕಾರಿ ಪದವಿ ಪೂರ್ವ ಕಾಲೇಜು ,ನೆಲಮಂಗಲ
( ದ್ರಾವಿಡ ವಿಶ್ವವಿದ್ಯಾಲಯ ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅನಿತಾ ಜಿ ಇವರು ಮಂಡಿಸಿದ ಸಂಶೋಧನಾ ಪ್ರಬಂಧ)

ಹವಿಗನ್ನಡ ಸಾಹಿತ್ಯ ಚರಿತ್ರೆ ಪ್ರಾರಂಭವಾಗುವುದು 1887 ರಲ್ಲಿ ಮುಂಬಯಿಯಲ್ಲಿ ಪ್ರಕಟವಾದ ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನದಿಂದ,ಕೃತಿ ಕರ್ತೃ ಕರ್ಕಿ ಸೂರಿ ವೆಂಕಟರಮಣ ರಮಣ ಶಾಸ್ತ್ರಿಗಳು,ಹವ್ಯಕ ಪ್ರಥಮ ವಾರ ಪತ್ರಿಕೆ " ಹವ್ಯಕ ಸುಬೋಧದ ಸ್ಥಾಪಕ ಸಂಶೋಧಕರು.
ಚಾರಿತ್ರಿಕ ಮಹತ್ವ
ಇದಾದ ಸುಮಾರು ನೂರು ವರ್ಷಗಳ ನಂತರ 1985ರಲ್ಲಿ ಹವ್ಯಕ ಮಹಿಳೆ ಡಾ.ಲಕ್ಷ್ಮೀ ಜಿ ಪ್ರಸಾದ್ ರಚಿಸಿದ ಸುಬ್ಬಿ ಇಂಗ್ಲಿಷ್ ಕಲ್ತದು ಎಂಬ ನಾಟಕ ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡದ ನಾಟಕವಾಗಿದೆ.
ಈ ನಾಟಕವನ್ನು ಮಹಿಳಾ ಬರಹಗಾರರಾದ ,ತುಳು ಜಾನಪದ ಸಂಶೋಧಕಾರಾಗಿ ಖ್ಯಾತರಾಗಿರುವ ,ಪ್ರಸ್ತುತ ನೆಲಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ// ಲಕ್ಷ್ಮೀ ಜಿ ಪ್ರಸಾದ ಅವರು ತಾವು ಏಳನೆಯ ತರಗತಿಯಲ್ಲಿ ಓದುತ್ತಿದ್ದಾಗ 1994 ರಲ್ಲಿ ರಚಿಸಿದರು.ಇದು ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಎಂದು ಹವ್ಯಕ ಅಧ್ಯಯನ ಕೇಂದ್ರದ ಪ್ರಧಾನ ನಿರ್ದೇಶಕರಾದ ಶ್ರೀಯುತ ನಾರಾಯಣ ಶಾನುಭೋಗರು ದೃಢೀಕರಿಸಿದ್ದಾರೆ.ಹೀಗೆ ಹವ್ಯಕ ಕನ್ನಡದ ಮೊದಲ ನಾಟಕಗಾರ್ತಿ ಎಂಬ ಹೆಗ್ಗಳಿಕೆಗೆ ಡಾ.ಲಕ್ಷ್ಮೀ ಜಿ ಪ್ರಸಾದ ಪಾತ್ರರಾಗಿದ್ದಾರೆ.
ಈ ನಾಟಕ ರಚನೆಯಾದ ಮರು ವರ್ಷವೇ ಈ ಲೇಖಕಿ ಓದುತ್ತಿದ್ದ ಶ್ರೀ ವಾಣಿವಿಜಯ ಪ್ರೌಢಶಾಲೆಯ ಯುವಜನೋತ್ಸವದಲ್ಲಿ ಪ್ರದರ್ಶನಗೊಂಡು ಮೊದಲ ಬಹುಮಾನ ಗಳಿಸಿತು.
ಕಾವ್ಯೇಷು ನಾಟಕಂ ರಮ್ಯಂ ( ಕಾವ್ಯಗಳಲ್ಲಿ ನಾಟಕವು ರಮಣೀಯವಾದುದು) ನಾಟಕ ಎಂಬುದು ಪ್ರದರ್ಶನದಲ್ಲಿ ತನ್ನ ಸಾರ್ಥಕ್ಯವನ್ನು ಕಂಡುಕೊಳ್ಳಬೇಕಾಗಿರುವುದೇ ಮುಖ್ಯ.
ಒಳ್ಳೆಯ ನಾಟಕ ಕೃತಿಯಲ್ಲಿ ಸಾಹಿತ್ಯದ ಜೊತೆ ಜೊತೆಗೆ ರಂಗ ಪರಿಕರ,ರಂಗಸಜ್ಜಿಕೆ,ನಟ ನಟಿಯರು,ಅಭಿನಯ, ಪ್ರೇಕ್ಷಕರು ಮತ್ತು ರಂಗಮನೆ( Theatre) ಮುಂತಾದ ಅಂಶಗಳು ಇದ್ದಾಗ ಮಾತ್ರ ಅದಕ್ಕೆ ಪೂರ್ಣತ್ವ ಪ್ರಾಪ್ತಿಯಾಗುತ್ತದೆ ಎಂದು ನಾಟಕ ವಿಮರ್ಶಕರಾದ ಡಾ.ವಸಂತ ಕುಮಾರ್ ಪೆರ್ಲ ಅವರು ಹೇಳುತ್ತಾರೆ.ಈ ನಾಟಕವು ಇವುಗಳಲ್ಲಿ ಹೆಚ್ಚಿನ ಅಂಶಗಳನ್ನು ಹೊಂದಿದೆ.ಎಲ್ಲಕ್ಕಿಂತ ಹೆಚ್ಚಾಗಿ ಹವ್ಯಕ ಮಹಿಳೆ ರಚಿಸಿದ ಮೊದಲ ಹವ್ಯಕ ಕನ್ನಡ ನಾಟಕ ಎಂಬ ಚಾರಿತ್ರಿಕ ಮಹತ್ವವನ್ನು ಪಡೆದಿದೆ.
ಆಶಯ
ಈ ನಾಟಕವು ಗಡಿನಾಡು ಕೇರಳದ ಕಾಸರಗೋಡು ಪರಿಸರದ ಹವ್ಯಕ ಕನ್ನಡ ಆಡುಭಾಷೆಯಲ್ಲಿ ರಚಿತವಾಗಿದೆ.ಕಾಸರಗೋಡಿನ ಪರಿಸರದ ಹವ್ಯಕ ಸಮುದಾಯದಲ್ಲಿ ಎಂಭತ್ತರ ದಶಕದಲ್ಲಿ ಹುಡುಗಿಯರನ್ನು ಪ್ರೌಢಶಾಲೆಗೆ ಕಳಹಿಸುವುದು, ಪಡೆಯುವುದು ಅಪರೂಪದ ವಿಚಾರವಾಗಿತ್ತು‌.ಹತ್ತನೆಯ ತರಗತಿ ನಂತರದ ಕಾಲೇಜು ಓದು ಬಹುತೇಕ ಗಗನ ಕುಸುಮವೇ ಆಗಿತ್ತು.ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ಹುಡುಗಿಯರನ್ನು ಉನ್ನತ ಶಿಕ್ಷಣಕ್ಕಾಗಿ ಕಳುಹಿಸುತ್ತಿರಲಿಲ್ಲ.
ಆ ಆತಂಕದ ಹಿನ್ನೆಲೆಯಲ್ಲಿ ನಾಟಕದ ವಸ್ತುವಿನಲ್ಲಿ ಸ್ತ್ರೀ ಶಿಕ್ಷಣದ ಅಗತ್ಯತೆಯ ಆಶಯ ಈ ನಾಟಕದಲ್ಲಿ  ಸಹಜವಾಗಿ ಮೂಡಿ ಬಂದಿದೆ.
"ಕೂಸು ಎಂತ ಓದಿದರೆಂತ ಒಲೆ ಬೂದಿ ಒಕ್ಕುದು ತಪ್ಪ"
ಹುಡುಗಿಯರು ಏನು ಓದಿದರೇನು? ಒಲೆ ಬೂದಿ ಗೋರುವುದು ತಪ್ಪದು ಎಂಬ ಗಾದೆ ಮಾತು ಹವ್ಯಕ ಭಾಷೆಯಲ್ಲಿ ಪ್ರಚಲಿತವಿತ್ತು.ಆಗಿನ ಕಾಲದಲ್ಲಿ ಎಂದರೆ ಸುಮಾರು ಮೂವತ್ತಮೂರು ವರ್ಷಗಳ ಹಿಂದೆ ರಚನೆಯಾದ ಕಾಲದ ಸಾಮಾಜಿಕ ಸ್ಥಿತಿಗತಿಗಳು,ಪರಿಸರ ಆಚರಣೆ,ಪದ್ದತಿಗಳು ಇದರಲ್ಲಿ ಅಭಿವ್ಯಕ್ತಿಯನ್ನು ಪಡೆದಿದೆ.
ಈ  ಕಿರು ನಾಟಕದಲ್ಲಿ ಆರು ಪಾತ್ರಗಳಿವೆ‌.,ಸುಬ್ಬಿ ,ಸುಬ್ಬಿಯ ಗಂಡ,ಸುಬ್ಬಿಯ ತಂದೆ ತಾಯಿ ಮತ್ತು ಸುಬ್ಬನ ಇಬ್ಬರು ಸ್ನೇಹಿತರು.ಇವರುಗಳು ಆಡುವ ಸಂಭಾಷಣೆಗಳು ಸಹಜವಾಗಿದ್ದು,ಪಾತ್ರಗಳು ನೈಜವಾಗಿ ಮೂಡಿ ಬಂದಿವೆ‌.
ಈ ನಾಟಕವು ಹಾಸ್ಯದ ಜೊತೆಗೆ ಗಂಭೀರ ಸಾಮಾಜಿಕ ಸಮಸ್ಯೆಯಾದ ಬಾಲ್ಯ ವಿವಾಹದ ಪರಿಣಾಮವನ್ನು ಬಿಂಬಿಸುತ್ತದೆ‌.ಕನ್ನಡ ಭಾಷೆಯ ಮಹತ್ವ ,ಅನ್ಯಭಾಷಾ ವ್ಯಾಮೋಹ,ಕಾನೂನು ಮಾಹಿತಿ ಹಾಗೂ ಸ್ತ್ರೀ ಶಿಕ್ಷಣದ ಅಗತ್ಯತೆಯ ಸಂದೇಶಗಳನ್ನು ಒಳಗೊಂಡಿದೆ.
ಕಥಾವಸ್ತು
ಸುಬ್ಬಿ ಹಳ್ಳಿಯ ಹುಡುಗಿ.ನಾಟಕದ ನಾಯಕಿ,ಹೈಸ್ಕೂಲ್ ಮೆಟ್ಟಿಲು ಹತ್ತದ ತುಸು ಮುಂಗೋಪಿ ಹುಡುಗಿ.ರಾಜನ( ಸುಬ್ಬನ) ಪೂರ್ಣ ಹೆಸರು ಸುಬ್ಬರಾಜ .ಅದನ್ನು ಎಸ್ ರಾಜ ಎಂದು ಚಿಕ್ಕದಾಗಿಸಿ ಚೊಕ್ಕದಾಗಿಸಿಕೊಂಡಿರುವ ಆಧುನಿಕ ಶಿಕ್ಷಣ ಪಡೆದ ಯುವಕ.ಈತ ನಾಟಕದ ನಾಯಕ.ಸುಬ್ಬ ರಾಜ ತನ್ನ ಸ್ನೇಹಿತರಲ್ಲಿ ತನ್ನ ಮಡದಿ ತುಂಬಾ ಓದಿದ ಹುಡುಗಿ ಎಂದು ಸುಳ್ಳು ಹೇಳುವುದು, ಸ್ನೇಹಿತರು ಮನೆಗೆ ಬರುತ್ತಾರೆಂದು ದಿಢೀರಾಗಿ ಇಂಗ್ಲಿಷ್ ಕಲಿಸುವುದು,ಇದರಿಂದಾಗಿ ಸ್ನೇಹಿತರ ಎದುರು ನಗೆ ಪಾಟಲಿಗೀಡಾಗಿ,ಮುಂದೆ ತನ್ನ ತಪ್ಪಿನ ಅರಿವಾಗಿ ನಮ್ಮ ಭಾಷೆ ಕನ್ನಡ ಕಸ್ತೂರಿ ಎಂದು ಅರಿವು ಆಗುತ್ತದೆ.
ಹೈಸ್ಕೂಲ್ ಓದ ಬೇಕಾದ ಚಿಕ್ಕ ವಯಸ್ಸಿನಲ್ಲಿ ಮಗಳಿಗೆ ಮದುವೆ ಮಾಡಿದ ಬಗ್ಗೆ ಪಶ್ಚಾತ್ತಾಪ ಪಟ್ಟ ತಂದೆ ತಾಯಿ ಮುಂದೆ ಸುಬ್ಬಿಯನ್ನು  ಓದಿಸಲು ಸಿದ್ಧರಾಗುವ ಕಥಾನಕ ಇದರಲ್ಲಿದೆ.
ಇಂಗ್ಲಿಷ್ ಬಾರದ್ದರೆ  ಏನು ತೊಂದರೆ ಇಲ್ಲೆ,ಅದು ನಾಚಿಕೆ ಹೇಳುವ ಭ್ರಮೆ ಬೇಡ,ಚೆಂದದ ಭಾಷೆ ನಮ್ಮ ಕನ್ನಡ ಕಸ್ತೂರಿ ಇಪ್ಪಗ ನಮಗೆ ಇಂಗ್ಲಿಷ್ ನ  ಹಂಗು ನಮಗೆಂತಕೆ  ? ಎಂಬಲ್ಲಿ ಕನ್ನಡದ ಮಹತ್ವವನ್ನು ಎತ್ತಿ ಹಿಡಿಯಲಾಗಿದೆ.
ಇನ್ನು ಇನ್ನೊಂದು ಕೊನೆಯ ಮತ್ತು ಒಂದು ಪ್ರಮುಖ ಅಂಶದ ಬಗ್ಗೆ ವಿಶ್ಲೇಷಿಸುವುದಾದರೆ ಸ್ತ್ರೀ ಶಿಕ್ಷಣದ ಮಹತ್ವದ ಬಗ್ಗೆ " ಒಂದು ಹೆಣ್ಣು ಕಲಿತರೇ ಆ ಕುಟುಂಬ ಕಲಿತಂತೆ" ಎಂಬ ಮಾತಿನಂತೆ ಈ ನಾಟಕವು ಮಹಿಳಾ ಲೇಖಕರಿಂದ ರಚನೆಗೊಂಡು ಸ್ತ್ರೀ ಶಿಕ್ಷಣದ ಅಗತ್ಯವನ್ನು ಸಾರುವ ನಾಟಕವಾಗಿದೆ‌
ಈ ನಾಟಕದ ಕೊನೆಯ ಘಟ್ಟದಲ್ಲಿ ಸುಬ್ಬಿಯ ತಂದೆ ತಾಯಿಯರು ಅವಳನ್ನು ಮತ್ತೆ ಶಾಲೆಗೆ ಕಳಹಿಸಲು ನಿರ್ಧರಿಸುತ್ತಾರೆ‌.ಸುಬ್ಬಿಯ ತಂದೆ " ಅವ ಬಪ್ಪಗ ಎರಡು ಮೂರು ವರ್ಷ ಆವುತ್ತು ,ಅಷ್ಟು ಸಮಯ ಇನ್ನು  ಸುಬ್ಬಿ ಶಾಲೆಗೆ ಹೋಗಿ ಕಲಿಯಲಿ,ಮುಂದೆದೆ ಅದು ಓದಲಿ " ಎನ್ನುವಲ್ಲಿ  ಇದು ಸ್ಪಷ್ಟವಾಗುತ್ತದೆ.
ನಾಟಕದ ಯಶಸ್ಸು ರಂಗ ಪ್ರಯೋಗದಲ್ಲಿದೆ.
ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕದ ಮೊದಲ ರಂಗ ಪ್ರಯೋಗ: 1985 ಸ್ಥಳ: ವಾಣೀ ವಿಜಯ ಪ್ರೌಢಶಾಲೆ,ಕೊಡ್ಲಮೊಗರು
ಎರಡನೇ ರಂಗ ಪ್ರಯೋಗ: 1995 ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲು
ತೃತೀಯ ರಂಗ ಪ್ರಯೋಗ : 1997 ಹವ್ಯಕ ಮಹಾ ಸಭಾ ವಾರ್ಷಿಕೋತ್ಸವ
ನಂತರವೂ ಅನೇಕ ಪ್ರದರ್ಶನಗಳನ್ನು ಕಂಡಿದೆ.
( ದ್ರಾವಿಡ ವಿಶ್ವವಿದ್ಯಾಲಯ ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅನಿತಾ ಜಿ ಇವರು ಮಂಡಿಸಿದ ಸಂಶೋಧನಾ ಪ್ರಬಂಧ)( ನನ್ನ ನಾಟಕವನ್ನು ಆಧರಿಸಿ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ಪ್ರಬಂಧ ಮಂಡನೆ ಆಗಿದ್ದರೂ ಕೂಡ ಹವ್ಯಕ ನಾಟಕ ಸಂಕಲನಕ್ಕೆ ಸೇರುವಷ್ಟು ಯೋಗ್ಯತೆ ಪಡೆದಿಲ್ಕ,ಯಾಕೆಂದರೆ ಯಾರಿಗೂ ನಾನು ಡೊಂಕು ಸಲಾಮು ಹಾಕಿಕೊಂಡು ಬಕೆಟ್ ಹಿಡಿದುಕೊಂಡು ಹೋಗುವುದಿಲ್ಲ- ಡಾ.ಲಕ್ಷ್ಮೀ ಜಿ ಪ್ರಸಾದ)
 ಪೂರ್ಣ ನಾಟಕವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ https://laxmihavyaka.blogspot.com/2014/01/1984.html?m=1

Wednesday 8 August 2018

ಗಿಳಿಬಾಗಿಲು ಹವ್ಯಕ ನುಡಿಗಟ್ಟು 53 ಸ್ವರ್ಗದ ಬಾಗಿಲಿಲಿ ನರಕದ ನಾಯಿ © ಡಾ.ಲಕ್ಷ್ಮೀ ಜಿ ಪ್ರಸಾದ

"ಸ್ವರ್ಗದ ಬಾಗಿಲಿಲಿ ನರಕದ ನಾಯಿ" ಇದೊಂದು  ನಮ್ಮ ಭಾಷೆಲಿ ಬಳಕೆಲಿ ಇಪ್ಪ  ಅಪರೂಪದ ನುಡಿಗಟ್ಟು. ಒಂದು ಕುಟುಂಬಲ್ಲಿ ಗೆಂಡನೋ ಮಗನೋ‌ ಅತೀ ದಾಂದೂಂ ಮಾಡುವ ಸ್ವಭಾವದೋರು.ಅದೇ ಮನೆಲಿ ಹೆಂಡತಿಯೋ ಅಬ್ಬೆಯೋ ತುಂಬಾ ಕುರೆ ಇದ್ದರೆ ಅಂತಹ ಸಂದರ್ಭಲ್ಲಿ ಬಳಕೆ ಮಾಡುವ ಮಾತಿದು.ಗೆಂಡ ತುಂಬಾ ದುಂದುವೆಚ್ಚದ ಸ್ವಭಾವದೋನು.ಯಾವಾಗಲೂ ತುಂಬಾ ಕ್ರಯದ ಅಂಗಿ ವಸ್ತ್ರ ಹಾಕುದು .ಮನೆಗೂ ತುಂಬಾ ಕ್ರಯದ ಸಾಮಾನುಗಳ ತಪ್ಪದು‌.ನೆಂಟ್ರುಗೊಕ್ಕೆ ಭಾರಿ ಸಮ್ಮಾನ ಮಾಡುವ ಸ್ವಭಾವದವ.ಅವನ ಹೆಂಡತಿ ತುಂಬಾ ಕುರೆ‌.ಚಾಯ ಮಾಡುವಾಗ ಸೆಕ್ಕರೆ ಕಮ್ಮಿ ಹಾಕುದು.ಊಟ ತಿಂಡಿ ಸರಿಯಾಗಿ ಮಾಡದ್ದೆ ಪೈಸೆ ಒಳಿಸುಲೆ ನೋಡುದು.ಹರುದ ಹಳೆಯ ಸೀರೆಯನ್ನೇ ಸುತ್ತುದದರ ನೋಡಿ ಅಪ್ಪಗ ಜನಂಗ ಸ್ವರ್ಗದ ಬಾಗಿಲಿಲಿ ನರಕದ ನಾಯಿ ಹೇಳುವ ಮಾತಿನ ಬಳಕೆ ಮಾಡುತ್ತವು.ಗೆಂಡ ಹೇಂಗೂ ದಾಂ ದೂಂ.ತುಂಬಾ ಖರ್ಚು ಮಾಡುತ್ತ‌.ಖರ್ಚು ಮಾಡುಲೆ ಪೈಸೆಗೇನೂ ಕೊರತೆ ಇಲ್ಲೆ‌ಹಾಂಗಿಪ್ಪಗ ಸರಿಯಾಗಿ ಊಟ ತಿಂಡಿ ಮಾಡದ್ದೆ ಹರುದ ಸೀರೆ ಸುತ್ತುವ ಹೆಂಡತಿಯ ಸ್ವರ್ಗದ ಬಾಗಿಲಿಲಿ ಇಪ್ಪ ನರಕದ ನಾಯಿಗೆ ಹೋಲಿಸಿ ವ್ಯಂಗ್ಯ ಮಾಡುವ ಮಾತಿದು.   

Monday 6 August 2018

ಗಿಳಿಬಾಗಿಲು: ಹವ್ಯಕ ನುಡಿಗಟ್ಟು 52 ಒಂದು ರಚ್ಚೆಂದ ಬಿಡ ಒಂದು ಗೂಂಜಿಂದ ಬಿಡ .© ಡಾ.ಲಕ್ಷ್ಮೀ ಜಿ ಪ್ರಸಾದ

ಮಕ್ಕೊಗೆ ಆಡುಲೆ ಎಷ್ಟೇ ಸಾಮಾನುಗ ಇರಲಿ,ಒಬ್ಬ ತೆಕ್ಕೊಂಡದೇ ಇನ್ನೊಬ್ಬಂಗೆ ಬೇಕು.ಅದೇ ಬೇಕು ಹೇಳಿ ಇಬ್ರುದೆ ಹಠ ಮಾಡುತ್ತವು.ಅಷ್ಟಪ್ಪಗ ಅಲ್ಲಿಪ್ಪೆ ಹೆರಿಯೋರು ದೊಡ್ಡೋನತ್ರೆ ಅವ ನಿನ್ನ ತಮ್ಮ ಅಲ್ಲದಾ ಅವಂಗೆ ಕೊಡು ಹೇಳಿರೆ ಅವ ಕೇಳುತ್ತಾ ಇಲ್ಲ ,ಸಣ್ಣೋನ ಹತ್ತರೆ ಬಾ ನಿನಗೆ ಬೇರೆ ಕೊಡ್ತೆ ಅದರ ಅಣ್ಣಂಗೆ ಕೊಡ್ತೆ ಹೇಳಿರೆ ಅವಂದೆ ಒಪ್ಪುತ್ತಾ ಇಲ್ಲೆ‌.ಇಬ್ರನ್ನು ಒಪ್ಪುಸುಲೆ ಎಡಿಯದ್ದ ಸಂದರ್ಭಲ್ಲಿ ಒಂದು ರಚ್ಚೆಂದ ಬಿಡ,ಒಂದು ಗೂಂಜಿಂದ ಬಿಡ ಹೇಳುವ ಮಾತಿನ ಬಳಕೆ ಮಾಡುತ್ತವು.ರೆಚ್ಚೆ ಗೂಂಜು ಇಪ್ಪದು ಹಲಸಿನ ಹಣ್ಣಿಂಗೆ‌.ಇಬ್ರುದೆ ಒಂದೇ ಹಣ್ಣಿಂಗೆ ಎಳದಾಡುತ್ತವು ಹೇಳಿ ಭಾವಿಸಿರೆ ಒಬ್ಬ ಗೂಂಜಿನ ಗಟ್ಟಿಯಾಗಿ ಹಿಡಿತ್ತ.ಇನ್ನೊಬ್ಬ ರೆಚ್ಚೆಯ ಗಟ್ಟಿಯಾಗಿ ಹಿಡಿತ್ತ.ಒಟ್ಟಿಲಿ ಹಣ್ಣು ಇಬ್ರಿಂಗೂ ಸಿಕ್ಕುತ್ತಿಲ್ಲೆ ಹೇಳಿ ಅರ್ಥ .
ಹಾಂಗೆಯೇ ಒಂದೇ ವಿಷಯಕ್ಕೆ ಸಂಬಂಧಿಸಿ ಅವರವರದ್ದೇ ಸರಿ ಹೇಳಿ ವಾದ ಮಾಡುವೋರ ಬಗ್ಗೆದೆ ಈ ಮಾತಿನ ಬಳಕೆ ಮಾಡುತ್ತವು.
ಡಾ.ಲಕ್ಷ್ಮೀ ಜಿ ಪ್ರಸಾದ

Thursday 2 August 2018

ಗಿಳಿಬಾಗಿಲು 51 ಹವ್ಯಕ ನುಡಿಗಟ್ಟು : ಮುಂದಣ ಎಮ್ಮೆಯ ಪಚ್ಚೆಯ ನೋಡಿ ಹಿಂದಣ ಎಮ್ಮೆ ನೆಗೆಮಾಡಿತ್ತಡ - ಡಾ.ಲಕ್ಷ್ಮೀ ಜಿ ಪ್ರಸಾದ

ಮುಂದಣ ಎಮ್ಮೆಯ ಪಚ್ಚೆಯ ನೋಡಿ ಹಿಂದಣ ಎಮ್ಮೆ ನೆಗೆ ಮಾಡಿತ್ತಡ.ಆದರೆ ಅದಕ್ಕುದೆ ಹಿಂದೆ ಅದೇ ಇದ್ದು ಹೇಳಿ ಗೊಂತಿಲ್ಲೆ ಹೇಳುವ ಮಾತು ಹವ್ಯಕ ಭಾಷೆಲಿ ಬಳಕೆಲಿ ಇದ್ದು.ಅವರವರ ತಪ್ಪು ಅವಕ್ಕವಕ್ಕೆ ಕಾಣ್ತಿಲ್ಲೆ.ಬೇರೆಯೋರ ತಪ್ಪು ಕಾಣುತ್ತು.ಅದರ ದೊಡ್ಡದಾಗಿ ಮಾಡಿ ಹೇಳ್ತವು.ಇಂತೋರ ಬಗ್ಗೆ ಹೇಳುವಗ ಬಳಕೆ ಅಪ್ಪ ನುಡಿಗಟ್ಟು ಇದು.ಮುಂದಣ ಎಮ್ಮೆಯ ಪಚ್ಚೆ( ಮೂತ್ರ ವಿಸರ್ಜನಾಂಗ)ಯ ನೋಡಿ ಹಿಂದಣ ಎಮ್ಮೆ ನೆಗೆ ಮಾಡಿತ್ತಡ.ಆದರೆ ಅದಕ್ಕೆ ಕೂಡ ಅದು ಇದ್ದು ಹೇಳುದು ಅದಕ್ಕೆ ಗೊಂತಿಲ್ಲೆ.
ಹಾಂಗೆ ಬೇರೆಯೋರ ಲೋಪದೋಷಂಗಳ ಎತ್ತಿ ಹೇಳುವ ಜನಂಗೊಕ್ಕೆ ಅವರವರ ಲೋಪ ದೋಷಂಗ ಕಾಣುತ್ತೇ ಇಲ್ಲೆ.ಅವರ ಬಟ್ಲಿಲಿ ಹೆಗ್ಳ ಕೊಳದು ನಾರುತ್ತರೂ ಬೇರೆಯೋರ ಬಟ್ಲಿಲಿ ನೆಳವು ಕೂಯಿದು ಹೇಳಿ ಹೇಳಿದಡ ಹೇಳುವ ಇನ್ನೊಂದು ನುಡಿಗಟ್ಟು ಇದಕ್ಕೆ ಸಂವಾದಿಯಾಗಿ ಬಳಕೆ ಆವುತ್ತು. ಅದೇ ರೀತಿ ಅವರವರ ಬೆನ್ನು ಅವಕ್ಕವಕ್ಕೆ ಕಾಣುತ್ತಿಲ್ಲೆ.ಹೇಳುವ ಮಾತುದೆ ಬಳಕೆಲಿ ಇದ್ದು.

Sunday 10 June 2018

ಗಿಳಿ ಬಾಗಿಲು( ಹವ್ಯಕ ಬ್ಲಾಗ್) ಹವ್ಯಕ ನುಡಿಗಟ್ಟು - 50 ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ - ಡಾ.ಲಕ್ಷ್ಮೀ ಜಿ ಪ್ರಸಾದ

ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ - ಡಾ.ಲಕ್ಷ್ಮೀ ಜಿ ಪ್ರಸಾದ

"ತೌಡು‌ ಮುಕ್ಕೇಲ ಹೋಗಿ ಉಮಿ‌ ಮುಕ್ಕೇಲ ಬತ್ತ "
- ಇದೊಂದು ಹವ್ಯಕ ಭಾಷೆಲಿ ಪ್ರಚಲಿತವಾಗಿಪ್ಪ ನುಡಿಗಟ್ಟು ,ಇದು ತುಳು ಮತ್ತೆ ಕನ್ನಡ  ಭಾಷೆಲಿಯೂ ಬಳಕೆಲಿ ಇದ್ದು.
ಮೊದಲಿನ ಕಾಲಲ್ಲಿ ಒಬ್ಬ ರಾಜ ಇತ್ತಿದ ಅಡ.ಅವನ ಊರಿಲಿ ತುಂಬಾ ಬರಗಾಲ ಬಂತು.ಅಂಬಗ ಅವ ಎಲ್ಲೊರಿಂಗೂ ಒಂದೊಂದು ಸೇರು ತೌಡು ಕೊಟ್ಟ ಅಡ.ಅಕ್ಕಿಯ ಹೆರಣ ಚೋಲಿಯ ಹೊಡಿಗೆ ತೌಡು ಹೇಳುತ್ತವು.ದನಗೊಕ್ಕೆ ಇದರ ಹಿಂಡಿ ಒಟ್ಟಿಂಗೆ ಕೊಡುತ್ತವು.ನಂತರ ಆ ರಾಜ ಒಂದು ಸೇರು ತೌಡಿನ ಬದಲು ಒಂದು ಸೇರು ಅಕ್ಕಿಯ ಹಿಂದೆ ಕೊಡಕ್ಕು ಹೇಳಿ‌ ಕಾನೂನು ಮಾಡಿದ ಅಡ‌.ಈ ರಾಜನ ದುರಾಡಳಿತಕ್ಕೆ ಜನ ರೋಸಿ ಹೋಗಿ ಬೇರೊಬ್ಬ ರಾಜ ಬಪ್ಪಲೆ ಕಾಯ್ತಾ ಇರ್ತವು.ಒಂದು ದಿನ ಇನ್ನೊಬ್ಬ ರಾಜ ಬಂದು ಇವನ ಸೋಲಿಸಿ ಆ ಊರಿನ ರಾಜ ಆದ ಅಡ.ಜನಂಗ ರಜ್ಜ ನೆಮ್ಮದಿಯ ಉಸುಲು ಬಿಟ್ಟವು.ಆದರೆ ಅದು ಹೆಚ್ಚು ದಿನ ಇತ್ತಿಲ್ಲೆ‌
ಈ ರಾಜ ಒಂದು ಸೇರು ಉಮಿ ಕೊಟ್ಟು ಒಂದು ಸೇರು ಅಕ್ಕಿ ವಸೂಲು ಮಾಡಿದ ಅಡ‌.
ಈ ಜಾನಪದ ಕಥೆಯ ಅಧರಿಸಿ ತೌಡು‌ ಮುಕ್ಕೇಲ ಹೋಗಿ ಉಮಿ ಮುಕ್ಕೇಲ ಬಂದ / ಬತ್ತ ಹೇಳುವ ಮಾತು ಹುಟ್ಟಿತ್ತು.
ಒಬ್ಬ  ಕೆಟ್ಟ ಅಧಿಕಾರಿ ಹೋಗಿ ಅವಂದಲೂ ಹೆಚ್ಚು ಧೂರ್ತ ಅಧಿಕಾರಿ ಬತ್ತ ಹೇಳುವ ಸಂದರ್ಭಲ್ಲಿ ಈ ಮಾತಿನ ಬಳಕೆ ಅವುತ್ತು.ಇದಕ್ಕೆ ಸಂವಾದಿಯಾಗಿ ಒಬ್ಬಂದೊಬ್ಬ ಅಸಲು ಹೇಳುವ ಮಾತುದೆ ಬಳಕೆಲಿ ಇದ್ದು
© ಡಾ.ಲಕ್ಷ್ಮೀ ಜಿ ಪ್ರಸಾದ

Monday 4 June 2018

ಗಿಳಿ ಬಾಗಿಲು ( ಹವ್ಯಕ ಬ್ಲಾಗ್) ಹವ್ಯಕ ನುಡಿಗಟ್ಟು 49 ತನ್ನಿಚ್ಛೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ © ಡಾ.ಲಕ್ಷ್ಮೀ ಜಿ ಪ್ರಸಾದ

ಕಳುದ ರಜೆಲಿ ಅಮ್ಮನ ಮನೆಗೆ ಹೋದಿಪ್ಪಗ ಅರಂತಾಡಿ ತಿಮ್ಮಪ್ಪಪ್ಪಚ್ಚಿ ಬಂದಿತ್ತಿದವು.ಅದೂ ಇದೂ ಮಾತನಾಡುತ್ತಾ ಆರೋ ಒಬ್ಬನ ವಿಚಾರ ಬಂತು.ಅಮ್ಮ ಅಪ್ಪಚ್ಚಿ ಹತ್ತರೆ ಅವಕ್ಕೆ ರಜ್ಜ ಬುದ್ಧಿ ಹೇಳಿ ಸರಿ ಮಾಡುಲಾಗದಾ ಹೇಳಿ ಕೇಳಿದ‌.ಅಷ್ಟಪ್ಪಗ ಅಪ್ಪಚ್ಚಿ " ಅವು ಆರ ಮಾತುದೆ ಕೇಳುವ ಜಾತಿಗ ಅಲ್ಲ ,ಅವಕ್ಕೆ ಅವು ಹೇಳಿದ್ದೆ ಆಯಕ್ಕು.ನಮ್ಮಲ್ಲಿ ತನ್ನಿಚ್ಚೆ ಹೇಳ್ತವಲ್ಲ ಹಾಂಗೆ ಇಪ್ಪ ಸ್ವಭಾವ ಹೇಳಿ ಹೇಳಿದವು.ಮತ್ತೆ ಪುನಃ ತನ್ನಿಚ್ಚೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ ಹೇಳುವ ಮಾತೇ ಇದ್ದನ್ನೇ ಹೇಳಿ ಹೇಳಿದವು.
ತನ್ನಿಚ್ಚೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ ಹೇಳುವ ಮಾತು ಕೇಳಿ ಅಪ್ಪಗ ಎನ್ನ ಕೆಮಿ ಕುತ್ತ ಆತು.ಅಂಬಗಳೇ ಕೇಳಿದೆ ಹಾಂಗೆ ಹೇಳಿರೆ ಎಂತದು ಹೇಳಿ.
 ಸುಮಾರು ಮಾಣಿಯಂಗೊಕ್ಕೆ ಪ್ರಾಯ ಆದ ಹಾಂಗೆ ತಲೆಕಸವು ಉದುರಿ ಬೋಳು ಅಪ್ಪದು ಇದ್ದು.ಇದಕ್ಕೆ ‌ಮದ್ದು ಇಲ್ಲೆ ಹಾಂಗೆಯೇ ತನ್ನ ಮಾತೇ ಅಂತಿಮ ಹಾಂಗೇ ನಡೆಯಕ್ಕು ಹೇಳುವೋರ ತಿದ್ದುಲೆ ಎಡಿಯ.ಈ ಎರಡಕ್ಕೂ ಪರಿಹಾರ ಇಲ್ಲೆ (ಸಾಣೆ ತಲೆಯ ಮಾಣಿಗೆ ಕೂಸು ಸಿಕ್ಕದ್ದ ಸಮಸ್ಯೆಯ ಎಳೆಯ ಆಧರಿಸಿ ಒಂದು ‌ಮೊಟ್ಟೆಯ ಕಥೆ ಸಿನೆಮಾ ಬಂದು ರೈಸಿದ್ದು ನಿಂಗೊಗೆಲ್ಲ ಗೊಂತಿಕ್ಕು)
ಎರಡು ಒಂದೇ ರೀತಿದು.ಹಾಂಗಾಗಿ ಎರಡನ್ನೂ ಸಮೀಕರಿಸಿ ತನ್ನಿಚ್ಛೆಗುದೆ ಸಾಣೆ ತಲೆಗುದೆ ಮದ್ದಿಲ್ಲೆ ಹೇಳಿ ಹೇಳುತ್ತವು.ನಮ್ಮ ಹವ್ಯಕ ಭಾಷೆಲಿ ಇಂತಹ ಅಪರೂಪದ ನುಡಿಗಟ್ಟುಗ ಇದ್ದು. ಇವೆಲ್ಲದರೆ ಸಂಗ್ರಹ ಮಾಡುವ ಅಗತ್ಯ ಇದ್ದು.
ಕಾಲಕ್ರಮೇಣ ಇಂಗ್ಲಿಷ್ ಹಾಂಗೆ ಇತರ ಭಾಷೆಗಳ ಪ್ರಭಾವಂದಾಗಿ ಇಂತಹ ನುಡಿಗಟ್ಟುಗಳ ಬಳಕೆ ಕಮ್ಮಿ ಆವುತ್ತಾ ಇದ್ದು.ನಮ್ಮ ಮುಂದಣ ಜನಾಂಗೊಕ್ಕೆ ತಿಳಿಸುವ ಸಲುವಾಗಿ ಆದರೂ ಇದರ ಸಂಗ್ರಹ ಮಾಡಕ್ಕು ಅಲ್ಲದಾ ?
ಡಾ.ಲಕ್ಷ್ಮೀ ಜಿ ಪ್ರಸಾದ

Thursday 26 April 2018

ಗಿಳಿ ಬಾಗಿಲು : ಹವ್ಯಕ ನುಡಿಗಟ್ಟು 48 ಕಥೆ ಕೈಲಾಸ © ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿ ಬಾಗಿಲು : ಹವ್ಯಕ ನುಡಿಗಟ್ಟು 48 ಕಥೆ ಕೈಲಾಸ  © ಡಾ.ಲಕ್ಷ್ಮೀ ಜಿ ಪ್ರಸಾದ
ಕಳುದ ಸರ್ತಿ ಊರಿಂಗೆ ಹೋದಿಪ್ಪಗ ಅಪ್ಪನ ಮನೆಲಿ ಮೂರು ಪುಚ್ಚೆ ಕುಂಞಿಗ ಇತ್ತಿದವು.ಇಲ್ಲಿ ಪುಚ್ಚೆಗ ಹಾವು ಚೇಳು ಅದು ಇದು ಹಿಡುದು ಮನೆ ಒಳ ತಂದು ಹಾಕುತ್ತವು ಹೇಳಿ ಪುಚ್ಚೆ ಕುಂಞಿಗಳ ಸಾಂಕಿಗೊಂಡು ಇತ್ತಿದವಿಲ್ಲೆ .ಇತ್ತೀಚೆಗೆ ಎನ್ನ ಸೊಸೆಯಕ್ಕ ( ತಮ್ಮನ ಮಗಳಕ್ಕ) ಅವರ ಅಜ್ಜನ ಮನೆ ಪೆರುವೊಡಿಗೆ ಹೋದಿಪ್ಪಗ ಅಲ್ಯಣ ಹತ್ರಣ ಮನೆಲಿ  ಎರಡು ಪುಚ್ಚೆ ಕುಂಞಿಗಳ ನೋಡಿ ಬೇಕು ಹೇಳಿ ಹಠ ಮಾಡಿ ಮನೆಗೆ ತಂದು ಸಾಂಕುತ್ತಾ ಇದ್ದವು.ಇವರ ಒಟ್ಟಿಂಗೆ ಕಾಕೆ ಅಥವಾ ಗೂಮನ  ಬಾಯಿಂದ ಬಿದ್ದ ಒಂದು ಸಣ್ಣ ಪುಚ್ಚೆ ಕುಂಞಿಗೆ ಸೇರ್ಪಡೆ ಆಯಿದು .ಅವು ಸಣ್ಣ ಕುಂಞಿಗ ಆಗಿದ್ದು ಅವಕ್ಕೆ ಪೆಡಿಗ್ರಿ ಹಾಕುತ್ತವು.ರಜೆಲಿ ಸೊಸೆಯಕ್ಕ ಮತ್ತೆ ಅಜ್ಜನ ಮನೆಗೆ ಹೋದವು.  ಅವು ಹೋದ ದಿನ ಇರುಳು ಒಂದು ಪುಚ್ಚೆ ಕುಂಞಿ ಸುಮಾರು ಹೊತ್ತ ಕಾಣೆ ಆತು. ಚೂ ಚು ಹೇಳಿ ದೆನಿಗೇಳಿರುದೆ ಒಂದರ ಸುದ್ದಿ ಇಲ್ಲೆ‌.ಒಂದು ವೇಳೆ ನಿಜಕ್ಕೂ ಒಂದು ಕುಂಞಿ ಕಾಣೆ ಆದರೆ ಮಕ್ಕ ಹಿಂದೆ ಬಪ್ಪಗ ಕೂಗಿ ಗಲಾಟೆ ಮಾಡುಗನ್ನೆ.ಅದರ ಊಹಿಸಿ ಆನು ಅಮ್ಮನತ್ತರೆ ಈ ಪುಚ್ಚೆ ಕುಂಞಿ ಕಾಣೆ ಆದರೆ ನಾವಿನ್ನು ಎಲ್ಲಿಯಾದರೂ ಆಶ್ರಮ ನೋಡಕ್ಕಷ್ಟೇ ಹೇಳಿ ನೆಗೆ ಮಾಡಿದೆ.ಅಂಬಗ ಅಮ್ಮ ನಿನ್ನ ಮಗ  ಸಣ್ಅದಿಪ್ಪಗ ಎನಗು ಗಣೇಶಂಗೂ  ಕಥೆ ಕೈಲಾಸ ಮಾಡುತ್ತಿತ್ತ ಹೇಳಿ ಹಿಂದೆ ನಡದ ಒಂದು ವಿಚಾರವ ಹೇಳಿದ.ಅನು ಮಗ ಸಣ್ಣದಿಪ್ಪಗ ಒಂದು ವರ್ಷದ ಮಾಣಿಯ ಅಮ್ಮನ ಮನೆಲಿ ಬಿಟ್ಟಿತ್ತಿದೆ.ಆನು ಸೈಂಟ್ ಅಲೋಶಿಯಸ್ ಕಾಲೇಜಿಲಿ ಲೆಕ್ಚರ್ ಆಗಿತ್ತಿದೆ.ಹಾಂಗಾಗಿ ಮಗನ ಅಮ್ಮನ ಮನೆಲಿ ಬಿಟ್ಟು ವಾರಕ್ಕೊಂದರಿ ಬಂದು ಗೊಂಡು ಇತ್ತಿದೆ.ಒಂದು ದಿನ ಅಮ್ಮ ಎನ್ನ ಮಗಂಗೆ ರಸ್ಕ್ ತಿಂಬಲೆ ಕೊಟ್ಟಿತ್ತಿದ ಅಡ.ತಮ್ಮ ಅವನ ನೋಡಿಗೊಂಡು ಎಂತದೋ ಕೆಲಸ ಮಾಡುತ್ತಾ ಇತ್ತಿದ ಅಡ‌.ರಜ್ಜ ಹೊತ್ತಿಲಿ ತಿರುಗಿ ನೋಡುವಗ ಎನ್ನ ಮಗನ ಉಸಿರು ಸಿಕ್ಕಾಕೊಂಡಿದು.ಅವನ ಹಿಡ್ಕೊಂಡು ಓಡಿ ಅಮ್ಮನ ಹತ್ತರೆ ಬಂದ ತಮ್ಮ.ಅಂಬಗ ಅಮ್ಮ ಮಗನ ಬಾಯಿಗೆ ಕೈಹಾಕಿ ಗೆಂಟ್ಲಿಲಿ ಸಿಕ್ಕಿ ಹಾಕಿಕೊಂಡ ರಸ್ಕಿನ ತುಂಡಿನ ತೆಗದ ಅಡ‌.ತಮ್ಮ ಅಮ್ಮನ ಹತ್ತರೆ ಕರಕೊಂಡು ಬಪ್ಪಷ್ಟರಲ್ಲಿ ಉಸಿರು ಕಟ್ಟಿ ಮೋರೆ ನೀಲಿ ಆಗಿ  ಮಾಣಿಯ ತಲೆ  ಅಡ್ಡ ಮಾಲಿತ್ತಡ.ದೇವರ ದಯೆಂದ ರಸ್ಕಿನ ತುಂಡು ಹೆರ ಬಂತು .
ಹಾಂಗಾಗಿ ಮಗ ಅರವಿಂದ ಬಚಾವ್ ಆದ.ಇಲ್ಲದ್ದರೆ ಕಥೆ ಕೈಲಾಸ ಆವುತ್ತಿತ್ತು.ಆನುದೆ ಗಣೇಶಂದೆ( ತಮ್ಮ) ಕೆರೆಯೋ ಬಾವಿಯೋ ನೋಡಕ್ಕಾತು ಅಷ್ಟೇ ಹೇಳಿ ಅಮ್ಮ ಹೇಳಿದ.
ಅದು ಸಮ ಕಥೆ ಕೈಲಾಸ ಹೇಳಿರೆ ಎಂತದು ? ತೀರಾ ಎಡವಟ್ಟಿನ ಕೆಲಸ ಹೇಳುವ ಅರ್ಥಲ್ಲಿ ಬಳಕೆ ಅವುತ್ತು‌. ತೀರಾ ಅಪಾಯ ಹೇಳುವ ಅರ್ಥಲ್ಲಿಯೂ ಬಳಕೆ ಆವುತ್ತು ಆದರೆ ಈ ನುಡಿಗಟ್ಟಿನ ಸರಿಯಾದ ಅರ್ಥ ಎಂತದು ? ಗೊಂತಿದ್ದೋರು ತಿಳಿಸಿ ಆತಾ ?
© ಡಾ.ಲಕ್ಷ್ಮೀ ಜಿ ಪ್ರಸಾದ

ಗಿಳಿ ಬಾಗಿಲು : ಹವ್ಯಕ ನುಡಿಗಟ್ಟು 47 ಅಳ್ಳೆಲಿಲ್ಲೆ © ಡಾ.ಲಕ್ಷ್ಮೀ ಜಿ ಪ್ರಸಾದ


ಅಳ್ಳೆಲಿಲ್ಲೆ
ಕಳುದ ಸರ್ತಿ ಊರಿಂಗೆ ಹೋದಿಪ್ಪಗ ಅಪ್ಪನ ಮನೆಲಿ ಮೂರು ಪುಚ್ಚೆ ಕುಂಞಿಗ ಇತ್ತಿದವು.ಇಲ್ಲಿ ಪುಚ್ಚೆಗ ಹಾವು ಚೇಳು ಅದು ಇದು ಹಿಡುದು ಮನೆ ಒಳ ತಂದು ಹಾಕುತ್ತವು ಹೇಳಿ ಪುಚ್ಚೆ ಕುಂಞಿಗಳ ಸಾಂಕಿಗೊಂಡು ಇತ್ತಿದವಿಲ್ಲೆ .ಇತ್ತೀಚೆಗೆ ಎನ್ನ ಸೊಸೆಯಕ್ಕ ( ತಮ್ಮನ ಮಗಳಕ್ಕ) ಅವರ ಅಜ್ಜನ ಮನೆ ಪೆರುವೊಡಿಗೆ ಹೋದಿಪ್ಪಗ ಅಲ್ಯಣ ಹತ್ರಣ ಮನೆಲಿ  ಎರಡು ಪುಚ್ಚೆ ಕುಂಞಿಗಳ ನೋಡಿ ಬೇಕು ಹೇಳಿ ಹಠ ಮಾಡಿ ಮನೆಗೆ ತಂದು ಸಾಂಕುತ್ತಾ ಇದ್ದವು.ಇವರ ಒಟ್ಟಿಂಗೆ ಕಾಕೆ ಅಥವಾ ಗೂಮನ  ಬಾಯಿಂದ ಬಿದ್ದ ಒಂದು ಸಣ್ಣ ಪುಚ್ಚೆ ಕುಂಞಿಗೆ ಸೇರ್ಪಡೆ ಆಯಿದು .ಅವು ಸಣ್ಣ ಕುಂಞಿಗ ಆಗಿದ್ದು ಅವಕ್ಕೆ ಪೆಡಿಗ್ರಿ ಹಾಕುತ್ತವು.ರಜೆಲಿ ಸೊಸೆಯಕ್ಕ ಮತ್ತೆ ಅಜ್ಜನ ಮನೆಗೆ ಹೋದವು. ಪೆಡಿಗ್ರಿ ತಿಂದು ಅ ಭ್ಯಾಸ ಆದ ಈ ಪುಚ್ಚೆಗ ಎನ್ನ ಅಮ್ಮ ಹಾಕಿದ ಯಾವುದನ್ನೂ ಮೂಸಿಕೂಡ ನೋಡಿಗೊಂಡು ಇತ್ತಿದವಿಲ್ಲೆ.ತಮ್ಮನ ಹೆಂಡತಿ ಅವಕ್ಕೆ ಹಾಲಿನ ಒಂದು ಗಿಣ್ಣಾಲಿಲಿ ಹಾಕಿ ಮಡುಗಿದರೆ ಕುಡುಕ್ಕೊಂಡು ಇತ್ತಿದವು.ಹಾಂಗೆ ಆನು ಅಮ್ಮನ ಹತ್ತರೆ ಇವಕ್ಕೆ ಹಾಲು ಹಾಕಮ್ಮ ಕುಡಿಗು ಹೇಳಿ ಹೇಳಿದೆ.ಅಮ್ಮ ಒಂದು ಗಿಣ್ಣಾಲಿಲಿ ಹಾಲು ಹಾಕಿ ಪುಚ್ಚೆ ಕುಂಞಿಗಳ ಎದುರು ಮಡುಗಿದ.ಒಂದು ಮೂಸಿಕ್ಕಿ ಹಾಂಗೆ ಹೋತು.ಇನ್ನೊಂದು ಮೂಸಿ ಕೂಡ ನೋಡಿದ್ದಿಲ್ಲೆ‌.ಅಂಬಗ ಆನು ಇವಕ್ಕೆ ಅಳ್ಳೆಲಿಲ್ಲೆ ಅಮ್ಮ ಹೇಳಿ ಹೇಳಿದೆ.ತಕ್ಷಣವೇ ಅಳ್ಳೆಲಿಲ್ಲೆ ಹೇಳಿರೆ ಎಂತದು ಹೇಳಿ ಸಂಶಯ ಆತು‌.ಅಮ್ಮನತ್ತರೆ ಕೇಳಿದೆ.ಉಮ್ಮ ಎನಗೂ ಗೊಂತಿಲ್ಲೆ ಹೇಳಿ ಅಮ್ಮ ಹೇಳಿದ.ಹಶುವಿಲ್ಲೆ ಹೇಳುವ ಅರ್ಥಲ್ಲಿ ಇದು ಬಳಕೆ ಆವುತ್ತು.
ಅಳ್ಳೆ ಹೇಳಿದರೆ ಪಕ್ಕೆಲುಬಿನ ಒಳಭಾಗಕ್ಕೆ ಹೇಳುದು.ಅಲ್ಲಿ ರಜ್ಜದೆ ಜಾಗೆ ಇಲ್ಲೆ ಹೇಳುವ ಅರ್ಥಲ್ಲಿ ಅಳ್ಳೆಲಿಲ್ಲೆ ಹೇಳುವ ನುಡಿಗಟ್ಟು ಬಳಕೆಗೆ ಬಂದಿಕ್ಕಾ ? ಗೊಂತಿಪ್ಪೋರು ದಯಮಾಡಿ ತಿಳಿಸಿ ಆತಾ
ನಮಸ್ಕಾರ
ಡಾ.ಲಕ್ಷ್ಮೀ ಜಿ ಪ್ರಸಾದ 

Saturday 17 February 2018

ಗಿಳಿಬಾಗಿಲು ಹವ್ಯಕ ಬ್ಲಾಗ್ : ಹವ್ಯಕ ನುಡಿಗಟ್ಟು - 46 ನುಸಿ ತಿಂದು ಜಾತಿ ಕೆಡುಲಾಗ© ಡಾ.ಲಕ್ಷ್ಮೀ ಜಿ ಪ್ರಸಾದ


ತುಂಬಾ ದಿನಂದ ನಂತರ ಗಿಳಿಬಾಗಿಲಿನ ತೆಗದ್ದೆ.ಕೆಲಸದ ಒತ್ತಡ ,ಬರವ ಮೂಡ್ ನ ಕೊರತೆ,ರಜ್ಜ ಆರೋಗ್ಯ ಸಮಸ್ಯೆಗ ಹೀಂಗೆ ಸುಮಾರು ನೆಪಂಗ ಇದ್ದು ಬರವಲಾಗದ್ದದಕ್ಕೆ.ಬಹುಶಃ ಅಂತರ್ಜಾಲವ ಹೆಚ್ಚಾಗಿ ಬಳಕೆ ಮಾಡುದೇ ಎಲ್ಲ ಸಮಯವ ತಿನ್ನುತ್ತು ಹೇಳುದು ಸರಿಯಾದ ಕಾರಣ ಹೇಳಿ ಅನ್ಸುತ್ತು.ಕಾರಣ ಏನೇ ಇರಲಿ,ಸುಮಾರು ದಿನಂದ ಎಂತದುದೆ ಬರದ್ದಿಲ್ಲೆ ಹೇಳುದು ವಾಸ್ತವ.
ಇಂದು ಎಂತಕೋ ಏನೋ ನುಸಿ ತಿಂದು ಜಾತಿ ಕೆಡ್ಸಿಕೊಂಬಲಾಗ  ಹೇಳುವ ಹವ್ಯಕ ನುಡಿಕಟ್ಟು ನೆನಪಾತು.ಎನ್ನ ಒಬ್ಬ ವಿದ್ಯಾರ್ಥಿ. ತುಂಬಾ ಪ್ರತಿಭಾವಂತ. ಒಳ್ಳೆಯ ಕಂಪೆನಿಲಿ ಕೆಲಸವೂ ಸಿಕ್ಕಿತ್ರು‌ತಿಂಗಳಿಂಗೆ ಒಂದು ಲಕ್ಷದಷ್ಟು ಸಂಬಳವೂ ಬಂದುಗೊಂಡು ಇತ್ತು. ಅವ ಆ ಕಂಪೆನಿಯ ಮೂರು ಲಕ್ಷ ರುಪಾಯಿಯ ಹೊಡವಲೆ ಎಂತದೋ ಮೋಸ ಮಾಡಿ ಸಿಕ್ಕಿಹಾಕಿಕೊಂಡ ಅಡ.ಅವನ ಕೆಲಸವೂ ಹೋತು.ಮರ್ಯಾದೆಯೂ ಹೋತು.ಅಲ್ಲ ಈ ಮೂರು ಲಕ್ಷ ಅವನ ಮೂರು ತಿಂಗಳ ಸಂಬಳದ ಪೈಸೆ .ಅಷ್ಟಕ್ಕಾಗಿ ಮೋಸ ಮಾಡಿ ಜೀವನ ಇಡೀ ಸಂಬಳ ಬಪ್ಪ ಒಳ್ಳೆಯ ಕೆಲಸ ಕಳಕೊಂಡ.
ಹೀಂಗೆ ಜುಜುಬಿ ಪೈಸೆಗೆ ಆತ್ಮ ಸಾಕ್ಷಿಯ ಮಾರಿಗೊಂಡು ಸಮಾಜದ ಮುಂದೆ ಬೆತ್ತಲಪ್ಪ ಸುಮಾರು ಜನಂಗ ಸಿಕ್ಕುತ್ತವು.
ಬಡ ಮಕ್ಕಳ ಕೈಂದ ತರಕಾರಿ,ಬೇಳೆ ಕಾಳು ತರ್ಸಿ ತಿಂಬ ಮಾಷ್ಟ್ರನ ಒಬ್ಬನ ಬಗ್ಗೆ ಆನು ಹೇಳುದು ಕೇಳಿದ್ದೆ. ಐವತ್ತ ಐವತ್ತೈದು ಸಾವಿರದಷ್ಟು ಸಂಬಳ ತೆಕ್ಕೊಂಬ ಅವ ರಾಜ್ಯ ಸಂಪನ್ಮೂಲ ವ್ಯಕ್ತಿ ಕೂಡ. ಬಾಯಿಲಿ ಭಾರೀ ಆದರ್ಶದ ದೊಡ್ಡ ದೊಡ್ಡ ಮಾತುಗ ಅಡ‌ .ಕಾರ್ಯಲ್ಲಿ ಮಾತ್ರ ಹೀಂಗೆ.ಬಡ ಮಕ್ಕಳ ಕೈಂದ ತರಕಾರಿ ಬೇಳೆ ಕಾಳು ತೆಕ್ಕೊಂಡು ಅವಕ್ಕೆ ಒಳ್ಳೆ ಮಾರ್ಕು ಕೊಡುದು,ಎಟೆಂಡೆನ್ಸ್ ಕೊಡುದು ಇತ್ಯಾದಿ ಮಾಡ್ತ ಅಡ.ಅದರ ಮೇಲಂದ ಇದು ಆರಿಂಗೂ ಗೊಂತಿಲ್ಲೆ ಹೇಳಿ ಜಾನ್ಸಿದ್ದ ಅಡ !
ಇಂತೋವು ಸುಮಾರು ಜೆನಂಗ ಇದ್ದವು ನಮ್ಮ ಸಮಾಜಲ್ಲಿ.

ಪುಚ್ಚೆ ಕಣ್ಣುಮುಚ್ಚಿಗೊಂಡು ಹಾಲು ಕುಡಿವಗ ಹೆರ ಇಡೀ ಕಸ್ತಲೆ ಆಯಿದು.ಹಾಂಗೆ ಆರೂ ನೋಡಿದ್ದವಿಲ್ಲೆ ಹೇಳಿ ಜಾನ್ಸುತ್ತಡ.ಹೀಂಗಾತು ಇವರ ಕತೆ.
ಇಂತೋರ ಬಗ್ಗೆ ಹೇಳುವ ನುಡಿಕಟ್ಟು. ನುಸಿ ತಿಂದು ಜಾತಿ ಕೆಡಿಸಿಕೊಂಬದು
ಬ್ರಾಹ್ಮಣರು ಸಸ್ಯಾಹಾರಿಗ.ಮಾಂಸ ತಿಂದರೆ ಜಾತಿ ಕಟ್ಟ ಹಾಂಗೆ.
 .ನುಸಿ ತೀರ ತೀರಾ ಸಣ್ಣ ಜೀವಿ.ಅದರಲ್ಲಿ ತಿಂಬಂತ ಮಾಂಸವೇ ಇಲ್ಲೆ.ಆದರೆ ನುಸಿ ತಿಂದರೂ ಜಾತಿ ಕಟ್ಟುಕಟ್ಟಲೆ ಮೀರಿದ ಹಾಂಗೆ ಆತು.ಒಂದೊಮ್ಮೆ ಜಾತಿ ಕೆಡುದೇ ಆದರೆ ಹಂದಿ ತಿನ್ನಕ್ಕು .ಹಂದಿಲಿ ಒಳ್ಳೆಯ ಕೊಬ್ಬು ಇಪ್ಪ ಕಾರಣ ಭಾರೀ ರುಚಿ ಅಡ.ಹಾಂಗಾಗಿ ತಿನ್ನಕ್ಕು ಹೇಳಿ ಇದ್ದರೆ ನುಸಿ ತಿಂಬದಲ್ಲ ಹಂದಿ ಮಾಂಸವೇ ತಿನ್ನಕ್ಕು. ನುಸಿ ತಿಂದು ಜಾತಿ ಕೆಡುಲಾಗ ಹೇಳಿ ಈ ನುಡಿಗಟ್ಟು ತಿಳಿಸುತ್ತು.
ಜುಜುಬಿ ಒಂದೆರಡು ಕಿಲ ತರಕಾರಿ, ಬೇಳೆ ಕಾಳು ಸೊಪ್ಪಿಂಗೆ ಮರ್ಯಾದಿ ಕಳಕೊಂಬಲಾಗ.ಜುಜುಬಿ ನಾಲ್ಕೈದು ಸಾವಿರ ಲಕ್ಷಕ್ಕೆ  ಅತ್ಮ ಸಾಕ್ಷಿಯ ಮಾರಿಕೊಂಬಲಾಗ‌.ಅದಿಲ್ಲದ್ದರೂ ನಮಗೆ ಬದುಕುಲೆ ಎಡಿತ್ತು.ಒಂದೊಮ್ಮೆ ಹೆಸರು ಹಾಳು ಮಾಡಿಕೊಂಬಲೆ ತಯಾರಿದ್ದರೆ ದೊಡ್ಡ ಗಾಳ ಹಾಕಕ್ಕು.ಪೈಸೆ ಹೊಡದರೆ ವಿಜಯ ಮಲ್ಯನ ಹಾಂಗೆ ಹತ್ತಿಪ್ಪತ್ತು ಸಾವಿ ಕೋಟಿಲಿ ಹೊಡೆಯಕ್ಕು.ರಜ್ಜ ಸಮಯ ಐಷಾರಾಮಲ್ಲಿ ಬದುಕುಲಕ್ಕು ಮತ್ತೆ ಅವನ ಹಾಂಗೆ ಹೆದರಿ ದೇಶ ಬಿಟ್ಟು ದುರ್ಯೋಧನ ವೈಶಂಪಾಯನ ಸರೋವರಲ್ಲಿ ಹುಗ್ಗಿ ಕೂದ ಹಾಂಗೆ ಎಲ್ಲಿಯೋ ಇರಕ್ಕಾವುತ್ತು ಅದು ಬೇರೆ ವಿಚಾರ!

ಸಣ್ಣ ಪುಟ್ಟ ವಿಚಾರಂಗೊಕ್ಕೆ ನಾವು ಮನಸಿನ ಸೋಲುಲೆ ಬಿಡುಲಾಗ .ಆತ್ಮ ಸಾಕ್ಷಿಯ ಬಿಡುಲಾಗ ಹೇಳುವ ಬುದ್ಧಿ ಮಾತಿನ ಈ ನುಸಿ ತಿಂದು ಜಾತಿ ಕೆಡುಲಾಗ ಹೇಳುವ ನುಡಿಕಟ್ಟು ತಿಳಿಸಿಕೊಡುತ್ತು.ಅಡಿಕೆಗೆ  ಹೋದ ಮಾನ ಆನೆ ಕೊಟ್ಟರೂ ಬಾರದು,ಆನೆ ಕದ್ದರೂ ಕಳ್ಳ ಅಡಿಕೆ ಕದ್ದರೂ ಕಳ್ಳ ಎಂಬ ಗಾದೆ ಮಾತುಗ ಕನ್ನಡ ಭಾಷೆಲಿ ಇದಕ್ಕೆ ಸಂವಾದಿಯಾಗಿ ಬಳಕೆಲಿ ಇದ್ದು
ನಿಂಗಳ ಪರಿಸರಲ್ಲಿಯೂ ಇದಕ್ಕೆ ಸಂವಾದಿಯಾಗಿ ಬಳಸುವ ನುಡಿಗಟ್ಟು ಇಕ್ಕು ಅಲ್ಲದಾ ? ಅದರ ತಿಳಿಸಿ ಕೊಡಿ ಆತಾ ? ನಮಸ್ಕಾರ ಮತ್ತೆ ಕಾಂಬ
ಡಾ.ಲಕ್ಷ್ಮೀ ಜಿ ಪ್ರಸಾದ